ಕಥೆ. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಥೆ. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಅಕ್ಟೋಬರ್ 4, 2009

ದೇವರು ಮತ್ತು ಚಟ




ಅಮಾವಾಸ್ಯೆಯ ದಿನ ಮಧ್ಹಾಹ್ನ 11.ಘಂ ಬಿಸಿಲು ಜಾಸ್ತಿಯಾಗುತ್ತಿತ್ತು, ರಾಜು ಕುಂಕುಮ,ಉದಬತ್ತಿ,ಕಡ್ಡಿಪಟ್ಟಣ ಮತ್ತು ನೈವೇದ್ಯ ತೆಗೆದುಕೊಂಡು ಅಮ್ಮ ಹೇಳಿದಂತೆ ಹೋಲದಲ್ಲಿರುವ ಪಂಪಸೆಟ್‍ಗೆ ಪೂಜೆ ಮಾಡಲು ಹೊರಟಿದ್ದ. ಹೋಗುವಾಗ ದಾರಿಯಲ್ಲಿ ಯಾರೋ ಸೇದಿ ಬಿಸಾಕಿದ್ದ ಸಿಗರೇಟಿನ ತುಂಡು ಬಿದ್ದಿತ್ತು, ಅದನ್ನು ನೋಡಿದ ತಕ್ಷಣ ಅವನಿಗೆ ಗೌಡರು ಸುರುಳಿ ಸುರಳಿಯಾಗಿ ಹೊಗೆ ಬಿಡುವ ದೃಶ್ಯ ಕಣ್ಮುಂದೆ ಬಂದಿತು. ಸುತ್ತಮುತ್ತ ನೋಡಿದ ಯಾರು ಕಾಣಲಿಲ್ಲ ನಿಧಾನವಾಗಿ ಕೈಯಲ್ಲಿ ತೆಗೆದುಕೊಂಡು ಮರದಬುಡದಲ್ಲಿರುವ ಕಲ್ಲಿನ ಮೇಲೆ ಕುಳಿತು ಸಿಗರೇಟಗೆ ಬೆಂಕಿ ಹಚ್ಚಿದ. ಸಾವಕಾಶವಾಗಿ ಹೊಗೆಯನ್ನು ಒಳಗೆ ಎಳೆದುಕೊಂಡು ಬಿಟ್ಟ ಮಜಾ ಅನಿಸಿತು. ಮತ್ತೋಮ್ಮೆ ಹೊಗೆಯನ್ನು ಎಳೆದ, ತಕ್ಷಣ ಹೊಗೆ ಗಂಟಲಲ್ಲಿ ಸಿಕ್ಕು ಕೆಮ್ಮಿದ ರಭಸಕ್ಕೆ ಕೈಯಲ್ಲಿರುವ ಕುಂಕುಮ,  ನೈವೇದ್ಯ ಎಲ್ಲ ಕಲ್ಲಿನ ಮೇಲೆ ಚೆಲ್ಲಿಹೋಯಿತು. ಯಾರೋ ಆ ದಾರಿಯಲ್ಲಿ ಬರ್ತಾ ಇದ್ದರು ಅವರನ್ನು ನೋಡಿ ಎಲ್ಲವನ್ನು ಅಲ್ಲಿಯೇ ಬಿಟ್ಟು ಮನೆಕಡೆಗೆ ಹೋಗಿಬಿಟ್ಟ ರಾಜು.
           ದಾರಿಯಲ್ಲಿ ಬರುತ್ತಿದ್ದ ಮದ್ಯವಯಸ್ಕರೊಬ್ಬರು ಒಂದು ಸಮಸ್ಯೆಯಲ್ಲಿ ಸಿಲುಕಿದ್ದರು. ಅದರ ಬಗ್ಗೆಯೆ ಬಿಸಿಲಿನಲ್ಲಿ ಬಳಲಿ ಚಿಂತಿಸುತ್ತಾ ಬರುತ್ತಿರುವಾಗ ದಾರಿಯಲ್ಲಿ ಕಂಡ ಗಿಡದ ನೆರಳಿನಲ್ಲಿ ವಿಶ್ರಮಿಸಲು ನಿಂತರು. ಅವರ ದೃಷ್ಟಿ ಕಲ್ಲಿನ ಮೇಲೆ ಹೊಯಿತು ಮುಳುಗುವವನಿಗೆ ಹುಲ್ಲು ಕಡ್ದಿ ಆಸರೆ ಎಂಬಂತೆ ಕುಂಕುಮ,ನೈವೇದ್ಯ ಬಿದ್ದ ಕಲ್ಲಿಗೆ ನಮಸ್ಕರಿಸಿ ತನ್ನ ಸಮಸ್ಯೆ ಬಗೆಹರಿಸಲು ಕೇಳಿಕೋಂಡ, ಸಂಕಷ್ಟ ದಲ್ಲಿರುವ ಮನುಷ್ಯನಿಗೆ ಕಲ್ಲು ಕೂಡ ದೇವರಂತೆ ಕಂಡಿರುವದು ಅತಿಶಯವೇನು ಅಲ್ಲ.

ಕಾಕತಾಳಿಯವೆಂಬಂತೆ ಮನೆಗೆ ಬರುವಷ್ಟರಲ್ಲಿಅವನ ಸಮಸ್ಯೆ ಬಗೆ ಹರಿದಿತ್ತು. ಆ ಯಜಮಾನನಿಗೆ ತಾನು ಗಿಡದ ಬುಡದಲ್ಲಿ ನಮಸ್ಕಕರಿಸಿದ ದೇವರೇ ನನ್ನ ಸಮಸ್ಯೆ ಬಗೆಹರಿಸಿದ ಎಂದು ತಿಳಿದು ಊರ ಜನರ ಮುಂದೆ ಹೇಳಿದ.


ಕಾಲಚಕ್ರ 20 ವರ್ಷ ಉರುಳಿತ್ತು, ರಾಜು ತರುಣನಾಗಿದ್ದ ಆದರೆ ಸಂಪೂರ್ಣ ಸಿಗರೇಟಿನ ಚಟದ ದಾಸನಾಗಿದ್ದ ಎರಡು ಘಂಟೆ ಕೂಡ ಅವನಿಂದ ಸಿಗರೇಟ ಬಿಡಲು ಆಗುತ್ತಿರಲಿಲ್ಲ ಚಟ ತನ್ನ ಹಟ ಸಾಧಿಸಿತ್ತು. ಇತ್ತ ಗಿಡದ ಬುಡದಲ್ಲಿ ಅಮ್ಮನವರ ದೇವಸ್ಥಾನ ತಲೆ ಎತ್ತಿ ನಿಂತಿತ್ತು ಅದೇ ಮಧ್ಯವಯಸ್ಕ ಅದರ ಪೂಜಾರಿ ಯಾಗಿದ್ದ. ಬೇಡಿದವರಿಗೆ ವರ ದಯಪಾಲಿಸುವ ಸತ್ವವುಳ್ಳ ದೇವತೆ ಆ ಅಮ್ಮ ಆಗಿದ್ದಳು.

ರಾಜುವಿಗೆ ತನ್ನ ಚಟದ ಬಗ್ಗೆ ಕೇಡುಕೆನಿಸಿ ಅದನ್ನು ಬಿಡಬೇಕೆಂದು ತಿರ್ಮಾನಿಸಿದರೂ ಅವನಿಂದ ಆಗುತ್ತಿರಲಿಲ್ಲ ಚಟವೇ ಗೆಲ್ಲುತಿತ್ತು. ಅವನಿಗೆ ಅಮ್ಮನ ದೇವಸ್ಥಾನದ ಮಹಿಮೆ ಬಗ್ಗೆ ಹೇಳಿದರು. ಅಮ್ಮನವರಿಗೆ ಹರಕೆ ಸಲ್ಲಿಸು ನಿನ್ನ ಚಟ ತಾನಾಗಿ ಬಿಟ್ತು ಹೊಗುತ್ತದೆ ಅಂದರು. ರಾಜು ತನ್ನ ಜೀವನದ ಕಡೆಯ ಸಿಗರೇಟ ಎಂದು ಅಂದುಕೊಳ್ಳುತ್ತಾ ಕೋನೆಯ ದಮ್ಮು ಹೋಡೆದು ತನ್ನ ಮೋಟಾರಸೈಕಲಿನಲ್ಲಿ ಅಮ್ಮನವರ ಗುಡಿಗೆ ಹೋರಟ ತೆಂಗಿನಕಾಯಿ ಒಡೆಸಿ, ಪೂಜೆ ಮಾಡಿಸಿ ನನ್ನ ಚಟ ಬಿಡಿಸೆಂದು ಕೇಳಿಕೊಂಡ. ದೇವರು ನನ್ನ ಹರಕೆ ಕೇಳುತ್ತಾಳೆ ಎಂದು ಬಲವಾಗಿ ನಂಬಿ ದೇವಸ್ಥಾನದಲ್ಲಿ 1 ಘಂಟೆ ಕಳೆದು ಇನ್ನುಮುಂದೆ ಸಿಗರೇಟ ಸೇದುವದಿಲ್ಲ ಎಂದು ತಿರ್ಮಾನಿಸಿ ಊರಕಡೆಗೆ ಹೊರಟ.

ಬೈಕಿನಲ್ಲಿ ಹಿಂತಿರುಗಿ ಬರುವಾಗ ಎರಡು ಘಂಟೆ ಆಗ್ತಾ ಇತ್ತು ದೇಹದಲ್ಲಿನ ನಿಕೋಟಿನ್ ಕಡಿಮೆಯಾಗಿ ಸಿಗರೇಟ ಸೇದುವ ಬಯಕೆ ಹೊತ್ತಿಕೊಂಡಿತ್ತು. ತಾನು ಅದಕ್ಕೆ ಸೋಲಬಾರದು ಸೋತರೆ ಚಟವೇ ಗೆದ್ದು ಬಿಡುತ್ತೆ, ದೇವರು ಸೋಲುತ್ತೆ, ಇಲ್ಲದಿದ್ದರೆ ದೇವರು ಗೆಲ್ಲುತ್ತೆ, ಚಟ ಸೋಲುತ್ತೆ. ಯಾವದು ಗೆಲ್ಲುತ್ತೆ ಎಂದು ಮನದಲ್ಲಿ ಅಂದು ಕೋಳ್ಳುತ್ತಾ ಮುಂದಿರುವ ಬಸ್ಸನ್ನು ಹಿಂದೆ ಹಾಕುವ ಭರದಲ್ಲಿ ಮುಂದೆ ಬರುವ ಲಾರಿಗೆ ಗುದ್ದಿ ಬಿಟ್ಟ. ತಲೆಗೆ ಏಟು ಬಿದ್ದಿತ್ತು ಬಸ್ಸಿನಲ್ಲಿಯ ಜನರು ಇಳಿದರು ತಮ್ಮ ಊರಿನ ರಾಜುವನ್ನು ಗುರುತಿಸಿದರು ಬಾಯಲ್ಲಿ ನೀರು ಹಾಕಿದರು, ನೀರು ಒಳಗೆ ಹೊಗಲಿಲ್ಲ ಆಗಲೇ ಉಸಿರು ನಿಂತು ಹೋಗಿತ್ತು, ದೇಹ ತಣ್ಣಗಾಗಿತ್ತು.

ಚಟವೂ ಗೆದ್ದಿತ್ತು, ದೇವರೂ ಗೆದ್ದಿತ್ತು ಆದರೆ ಸೋತು ಮಲಗಿತ್ತು ರಾಜುವಿನ ದೇಹ. ಶವಪರಿಕ್ಷೆಯಲ್ಲಿ ವೈದ್ಯಾಧಿಕಾರಿಗಳು ಶರಾ ಬರೆದಿದ್ದರು " ರಾಜು ಮನಸ್ಸಿನ ತುಮುಲದಿಂದ ನಿಯಂತ್ರಣ ತಪ್ಪಿ ತಾನಾಗಿ ಲಾರಿ ಕೆಳಗೆ ಬಿದ್ದಿದ್ದಾನೆ" ಎಂದು. ಯಾಕೆಂದರೆ ಚಟ ಮತ್ತು ದೇವರು ತನ್ನ ಮೇಲೆ ಅಪವಾದ ಹೋತ್ತು ಕೋಳ್ಳಲು ತಯಾರಿರಲಿಲ್ಲ.......................



(ಆತ್ಮೀಯರ  ಒತ್ತಾಯದ ಮೇರೆಗೆ ನಾನು ಬರೆಯಲು ಪ್ರಯತ್ನಿಸಿದ ಮೊದಲ ಕಥೆ. ತಪ್ಪಿದ್ದರೆ ತಿದ್ದಿ ಓದಿಕೋಳ್ಳಿ.
ನಿಮ್ಮ ಸಲಹೆ, ಸೂಚನೆ ಮತ್ತು ನಿಮ್ಮ ಅಭಿಪ್ರಾಯಗಳ ನೀರಿಕ್ಷೆಯಲ್ಲಿ)